ಈಸಿಚೇರಿನಲ್ಲಿ ಬೆನ್ನೊರಗಿಸಿ ಕೂತ ಹಳೆಯದೊಂದು ಅನುಭವ. ಹೆಂಡತಿ,ಮಗ, ಮಗಳು, ಅಣ್ಣ ತಮ್ಮ, ಅವರು ಇವರು ಎಲ್ಲರೂ ... ನೆನಪಲ್ಲಿ ಮೊನ್ನೆ ಮಾರಿದ ತಾನೇ ನೆಟ್ಟು ಬೆಳೆಸಿದ ತೋಟ... ಅಲ್ಲಿನ ಬಾಳೆಯ ಗಿಡ ಹಣ್ಣು ಬಿಟ್ಟು ಗೊನೆ ಮಾಗಿ ಬಾಳೆಯ ನಡು ಮುರಿಯದಂತೆ ಕೊಟ್ಟ ಊತ. ಗೊನೆ ಮಾರಿದ ಮೇಲೆ ಮರೆತ ಗಿಡ. ಮಳೆಯೊಂದು ಮುಗಿದು ವಿರಾಮದ ಹನಿಗಳ ಹರಿಕೆ. ಮಂದಕಣ್ಣಿನೆರಡು ತುದಿಯಲ್ಲೂ ಒರೆಸಿ ಒರೆಸಿ ಉಮ್ಮಳಿಸಿ ಬರುವ ಹೃದಯದ ವೇದನೆ.. ಬಯತ್ತಿರುವುದು ಆಪ್ಯ ಹೃದಯ. ಅತ್ತಿತ್ತ ಕೈಯ್ಯಾಡಿಸಲು ಸಿಗುವುದು ತನ್ನದೆನಿಸಿದ್ದ ಊರುಗೋಲು. ನಡುಗುವ ಕೈ ತಾಗಿ ಕೋಲು ಎರಡಡಿ ದೂರ ಬಿದ್ದಿದೆ. ಎದ್ದು ಹೋಗಿ ಹೆಕ್ಕಲು ಶಕ್ತಿಯಿಲ್ಲ. ಆಪ್ಯವಾದುದೊಂದು ಬಿದ್ದು ಕಳಕೊಂಡಷ್ಟು ಭಾರ....
- ಕಾವ್ಯಮಯಿ
ಗರಿ ಗರಿ ಇಸ್ತ್ರಿಯ ಬಟ್ಟೆ ಕಳಚಿಟ್ಟು ಸಮಾಜದ ಗಣ್ಯತನದ ಮೊಹರೊತ್ತಿದ್ದವ 'ಕೆಲಸ' ಮುಗಿಸಿ ಮತ್ತೆ ಅದೇ ಇಸ್ತ್ರಿಯುಟ್ಟು ಗಲ್ಲಿಯಿಂದ ಹೊರನಡೆಯುತ್ತಾನೆ. ಈಗವನು ಮತ್ತೆ ಸಭ್ಯ!
-ಕಾವ್ಯಮಯಿ
ಮನೆಯ ತೋಟದಲ್ಲೊಂದು ಹಕ್ಕಿ ಸುಂದರವಾದ ಗೂಡು ಕಟ್ಟುತ್ತಿತ್ತು . ದಿನವೂ ಈ ಆರ್ಕಿಟೆಕ್ಚರಿ ನೋಡಿಕೊಂಡು ಬರುತ್ತಿದ್ದೆ. ಒಂದೊಂದೇ ಕಡ್ಡಿಗಳನ್ನು ಕೊಕ್ಕಿನಿಂದ ಹೆಕ್ಕಿ ಹೆಕ್ಕಿ ಅರಮನೆ ಕಟ್ಟಿದ ಹಕ್ಕಿ ಸಂಗಾತಿಯ ಜೊತೆಗೂಡಿತು. ಕೆಲದಿನಗಳಲ್ಲಿ ಐದಾರು ಮೊಟ್ಟೆಗಳು. ಮತ್ತ್ಹಲವು ದಿನದಲ್ಲಿ ಚೀಂವ್ ಗುಟ್ಟುತ್ತಿದ್ದವು ಮರಿಗಳು. ರೆಕ್ಕೆ ಬಲಿತು ಹಾರಿದವು ಗೂಡನ್ನು ಇಲ್ಲಿಯೇ ಬಿಟ್ಟು. ಭ್ರಮವೆನಿಸಿದ ಬದುಕು- ತಾತ್ಕಾಲಿಕ ಬದುಕಲ್ಲೊಂದು ಶಾಶ್ವತಕ್ಕಾಗಿ ಓಡಾಡುವ ಆತುರ. ಹಕ್ಕಿ ಬಿಟ್ಟು ಹೋದ ಆ ಗೂಡೂ ಕಳಿಸಿತು ಬಹಳಷ್ಟು ಪಾಠ...
-
ಕಾವ್ಯಮಯಿ